
ಹೇರ ಸಾಂತಪ್ಪ ಜೈನ ಅವರು 19 ಸೆಪ್ಟೆಂಬರ್ 1950 ರಂದು ಜನಿಸಿದರು. ತಂದೆ ತಿಮ್ಮಯ್ಯ ಬಾಳಿಕ್ವಾಳ ಮತ್ತು ತಾಯಿ ಲಕ್ಷ್ಮೀಮತಿ ಅಮ್ಮ ಅವರ ಸಂಸ್ಕಾರದಲ್ಲಿ ಬೆಳೆದ ಅವರು, ಬಾಲ್ಯದಿಂದಲೇ ಧಾರ್ಮಿಕ ಮೌಲ್ಯಗಳು ಹಾಗೂ ಸಮಾಜಸೇವೆಯತ್ತ ಒಲವು ಹೊಂದಿದ್ದರು. ಹನ್ನೆರಡು ಸಹೋದರ–ಸಹೋದರಿಯರ ಕುಟುಂಬದಲ್ಲಿ ಬೆಳೆಯುತ್ತಿದ್ದಾಗ ಸಹೋದರ–ಸಹೋದರಿಯರ ಆತ್ಮೀಯತೆ, ಧರ್ಮ-ಸಂಸ್ಕೃತಿ ಅವರ ಬದುಕಿಗೆ ಬುನಾದಿಯಾದವು.
ಅವರು ಶಿಕ್ಷಣದಲ್ಲಿ ಕ್ರೀಡಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು, ಎಂ.ಪಿ.ಇ. (Master of Physical Education) ವರೆಗೆ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಬಳಿಕ ಧರ್ಮಸ್ಥಳ ಹೈಸ್ಕೂಲ್ , ಮಣಿಪಾಲ ಮೆಡಿಕಲ್ ಕಾಲೇಜು ತದನಂತರ ಹೊರದೇಶದಲ್ಲಿ ೧೪ ವರುಷಗಳ ಕಾಲ ಸಬ್ ಇನ್ಸ್ಪೆಕ್ಟರುಗಳಿಗೆ ಶಿಕ್ಷಣ ನೀಡಿದ ಪ್ರತಿಭಾವಂತರು . ಈ ಸಂದರ್ಭದಲ್ಲಿ ಅವರು ಉತ್ತಮ ಕ್ರೀಡಾಪಟು ಹಾಗೂ ಶ್ರೇಷ್ಠ ಮಾತುಗಾರನಾಗಿ ಹೆಸರು ಗಳಿಸಿದರು. ಬದುಕಿನ ವಿದ್ಯಾಭ್ಯಾಸಕ್ಕೆ ಆರ್ಥಿಕ ಹಾಗೂ ಮನೋಬಲದ ಬಲ ನೀಡಿದವರು ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮತ್ತು ದಿ. ಜಿನೇಂದ್ರ ಪ್ರಸಾದ್ ಕುಳವಳಿಕೆ ಎಂಬುದು ಅವರ ಜೀವನದ ಪ್ರಮುಖ ನೆನಪು.
ವೈಯಕ್ತಿಕ ಜೀವನದಲ್ಲಿ, 13 ಜೂನ್ 1979 ರಂದು ಪ್ರೇಮಕುಮಾರಿಯವರನ್ನು ವಿವಾಹವಾಗಿ, ಪೂರ್ಣಿಮಾ ಯಸ್ ಜೈನ್ ಮತ್ತು ಪ್ರತಿಭಾ ಯಸ್ ಜೈನ್ ಎಂಬ ಇಬ್ಬರು ಪುತ್ರಿಯರ ತಂದೆಯಾದರು. ಕುಟುಂಬ ಪ್ರೀತಿ, ಧಾರ್ಮಿಕ ನಿಷ್ಠೆ ಮತ್ತು ಸಾಮಾಜಿಕ ಬದ್ಧತೆಯೊಂದಿಗೆ ಬದುಕನ್ನು ನಡೆಸಿದವರು.
ಧಾರ್ಮಿಕ ಜೀವನದಲ್ಲಿ ಅವರು ಸದಾ ಮುಂದಿದ್ದವರು. 1995ರಲ್ಲಿ ಇಜಿಲಂಪಾಡಿ ಬಸದಿಯ ಜೀರ್ಣೋದ್ಧಾರದಲ್ಲಿ ಪದ್ಮಾವತಿ ದೇವಿಯ ಗುಡಿಯ ನಿರ್ಮಾಣಕ್ಕೆ ಮಾಡಿದ ದಾನ ಅವರ ಉದಾರ ಮನಸ್ಸಿನ ಸಾಕ್ಷಿ. ಇತ್ತೀಚಿನ 2024ರ ಬಸದಿಯ ಶುದ್ಧ ಸಂಪ್ರೋಕ್ಷಣೆ ಹಾಗೂ ಜೀರ್ಣೋದ್ಧಾರದಲ್ಲಿಯೂ ಅವರು ಕೊಡುಗೆ ನೀಡಿದ್ದು, ಸಮುದಾಯಕ್ಕೆ ಮಾದರಿಯಾಗಿದೆ.
ಅವರ ಬದ್ಧತೆ ಧರ್ಮಕ್ಕೆ ಸೀಮಿತವಾಗಿರದೆ ಸಮಾಜಸೇವೆಯಲ್ಲಿಯೂ ಹರಡಿತ್ತು. 1967ರಲ್ಲಿ ಕಡಬ ತಾಲೂಕು ಕಲ್ಲುಗುಡ್ಡೆಯ ಆರ್.ಯಸ್.ಯಸ್. ಸ್ಥಾಪನೆಗೆ ಅವರು ಮುನ್ನಡೆದರು. ಹರಿಕಾಚಿಂತಾಯ , ವಿಷುಮೂರ್ತಿ ಕಾಚಿಂತಾಯ ಅವರ ಸಹಾಯ, ಹೇರ ಕೃಷ್ಣ ಭಟ್ ಮತ್ತು ಆಲಂಕಾರಿನ ಸ್ಯಾಮ್ ಅವರ ಜೊತೆಗೂಡಿ ಈ ಸಂಸ್ಥೆಯನ್ನು ಬಲಿಷ್ಠಗೊಳಿಸಿದರು. ಇದಕ್ಕೆ ದಾರವಾಡದಲ್ಲಿ ನೇರವಾಗಿ ಅಟಲ್ ಬಿಹಾರಿ ವಾಜಪೇಯಿ ಅವರಿಂದ ಪಡೆದ ಎರಡು ವರ್ಷದ ತರಬೇತಿ ಸಹಕಾರಿಯಾಯಿತು. ಈ ಕಾರ್ಯವು ಬಹು ಜನರಿಗೆ ತಿಳಿಯದ ಮಹತ್ವದ ಕೊಡುಗೆಯಾಗಿದೆ. ತನ್ನ ಉದ್ಯೋಗಕ್ಕಾಗಿ ನಿರ್ಗಮಿಸುವ ಸಮಯದಲ್ಲಿ ಕುರಾಟ ಪಾದೆ ಹರೀಶ್ ಚಂದ್ರ ಶೆಟ್ಟಿ ಇವರಿಗೆ ಜವಾಬ್ದಾರಿ ಕೊಟ್ಟಿದ್ದರು .
ಹೇರ ಸಾಂತಪ್ಪ ಜೈನ ಅವರು ಧಾರ್ಮಿಕ, ಸಾಮಾಜಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಮಾಡಿದ ಕೊಡುಗೆಗಳಿಂದ ಮೈಸೂರು ನಗರಕ್ಕೆ ಹೆಮ್ಮೆ ತಂದವರು. ಸರಳ ಜೀವನ, ಶ್ರೇಷ್ಠ ಮಾತುಗಾರಿಕೆ, ಧಾರ್ಮಿಕ ನಿಷ್ಠೆ ಮತ್ತು ಸಾಮಾಜಿಕ ಹೊಣೆಗಾರಿಕೆಯ ಮೂಲಕ ಅವರು ಸಮುದಾಯದಲ್ಲಿ ಸ್ಫೂರ್ತಿದಾಯಕ ವ್ಯಕ್ತಿತ್ವವಾಗಿ ಉಳಿದಿದ್ದಾರೆ.